

18th April 2026

ಕುಷ್ಟಗಿ : ಏಪ್ರಿಲ್ 18 : ಪುಸ್ತಕ ನಮ್ಮೆಲ್ಲರ ಆಸ್ತಿಯಾಗಿದ್ದು, ಓದುವ ಅಭಿಯಾನವನ್ನು ವಿಸ್ತರಿಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವದ ಯೋಜನೆ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮಕ್ಕೆ ಏಪ್ರೀಲ್ 18ರಂದು ಕೊಪ್ಪಳ ಜಿಲ್ಲೆಯಲ್ಲಿ ಚಾಲನೆ ಸಿಕ್ಕಿತು.
ಕರ್ನಾಟಕ ಸರ್ಕಾರದ ರಾಜ್ಯ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಇವರ ಆಶ್ರಯದಲ್ಲಿ ಕುಷ್ಟಗಿ ನಗರದ ಹಿರಿಯ ಚಿಂತಕರು ಹಾಗೂ ಮಾಜಿ ಶಾಸಕರಾದ ಕೆ ಶರಣಪ್ಪ ವಕೀಲರ ಮನೆಯಲ್ಲಿನ ಪುಟ್ಟ ಗ್ರಂಥ ಭಂಡಾರದ ಸಮ್ಮುಖದಲ್ಲಿ, ಲಕ್ಷ ಗ್ರಂಥಾಲಯಗಳ ಯೋಜನೆ ಮನೆಗೊಂದು ಗ್ರಂಥಾಲಯದ ರೂಪು ರೇಷದ ಕರಪತ್ರವನ್ನು ವಿತರಿಸುವ ಮೂಲಕ ಪ್ರಾಧಿಕಾರದ ರಾಜ್ಯಾಧ್ಯಕ್ಷರಾದ ಡಾ.ಮಾನಸ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.,
ಈ ವೇಳೆ ಮಾನಸ ಅವರು ಮಾತನಾಡಿ, ಓದಬೇಕು, ಬರೆಯಬೇಕು ಎನ್ನುವ ಆಶಯದ ಅರ್ಥಪೂರ್ಣ ಮನಸುಗಳ ಮನೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಗುತ್ತಿರುವುದು ಸಂತಷದ ಸಂಗತಿ ಎಂದರು.
"ನೀನು ಜೀವನದಲ್ಲಿ ಎರಡು ರೂಪಾಯಿ ಗಳಿಸುತ್ತಿದ್ದರೆ ಅದರಲ್ಲಿ ಒಂದು ರೂಪಾಯಿ ಆಹಾರಕ್ಕೆ ಬಳಸು; ಮತ್ತೊಂದು ರೂಪಾಯಿಯನ್ನು ಪುಸ್ತಕಕ್ಕೆ ಬಳಸು" ಎಂಬುದು ಜ್ಞಾನದ ಶಿಖರ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೇಳಿಕೆಯಾಗಿದೆ. ಅವರ ಈ ಹೇಳಿಕೆಯೇ ಮನೆಯಲ್ಲಿ ಪುಟ್ಟದೊಂದು ಗ್ರಂಥಾಲಯ ಇರಬೇಕು ಎಂಬ ಯೋಜನೆ ರೂಪುಗೊಳ್ಳಲು ಪ್ರೇರಣೆಯಾಯಿತು ಎಂದು ಅವರು ತಿಳಿಸಿದರು.
ನಾವೆಲ್ಲರೂ ಈಗಾಗಲೇ ಆಹಾರಕ್ಕಾಗಿ ಒಂದು ರೂಪಾಯಿ ಬಳಿಸಿದ್ದೇವೆ. ಆದರೆ, ಪುಸ್ತಕಕ್ಕಾಗಿ ಮೀಸಲಿಡಬೇಕಾದ ಮತ್ತೊಂದು ರೂಪಾಯಿಯನ್ನು ಇನ್ನಾವುದಕ್ಕೋ ಬಳಸಿದ್ದು ಅದನ್ನು ಹುಡುಕಲೆಂದೇ ನಾವು ಲಕ್ಷ ಗ್ರಂಥಾಲಯಗಳ ಯೋಜನೆ ರೂಪಿಸಿ ಅನುಷ್ಠಾನ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಲಕ್ಷ ಮನೆಗಳಲ್ಲಿ ಗ್ರಂಥಾಲಯದ ಬೀಜ ಬಿತ್ತುತ್ತೇವೆ ಎಂದು ತಿಳಿಸಿದರು.
ಜನರನ್ನು ಪೂಜಾಮನೆಗೆ ಕನೆಕ್ಟ್ ಮಾಡಿದ್ದಕ್ಕಾಗಿ ವಿಭೂತಿ, ಕರ್ಪೂರ, ಊದು ಬತ್ತಿ ಖರೀದಿಸುತ್ತ ಸಾಗಿದ್ದರಿಂದ ಊದುಬತ್ತಿ ಮಾರುವವರು, ಕರ್ಪೂರ ಮಾರುವವರು ಜೀವನ ಕಟ್ಟಿಕೊಂಡರು. ಲಕ್ಷ್ಯಾಧೀಶರಾದರು. ಆದರೆ, ಜ್ಞಾನ ದಾಹ ಹೆಚ್ಚುವ ಪುಸ್ತಕಗಳನ್ನು ನಾವು ಪೂಜಾ ಸಾಮಗ್ರಿ ಜೊತೆಗೆ ಮಾರಾಟ ಮಾಡಲಿಲ್ಲ. ಈ ಕಾರಣದಿಂದಲೇ ಪುಸ್ತಕ ಪ್ರಕಟಿಸುವ ಮಾಲೀಕ ಈಗ ಬಡವನಾಗಿದ್ದೇನೆ ಎಂದರು. ಪೂಜೆಯನ್ನು ಮನೆಯೊಳಗೆ ಮತ್ತು ಮನೆ ಹೊರಗೆ ಮಾಡಿದೆವು. ಆದರೆ, ಮನೆಯಲ್ಲಿರಬೇಕಾದ ಜ್ಞಾನವನ್ನು ಹೊರ ಹಾಕಿದೆವು.
ಪುಸ್ತಕ ಅಂದರೆ ಬರೀ ಪುಸ್ತಕ ಅಲ್ಲ; ಅದು ಜ್ಞಾನದ ಆಗರ. ನಾವು ಜ್ಞಾನದ ವಾರಸುದಾರರು. ಹಾಗಾಗಿ ಹಿರಿಯರು ಮನೆಯಲ್ಲಿ ಪೂಜಾ ಮನೆ ಮಾಡಿದ್ದಾರೆ. ನಾವು ಪೂಜಾ ಮನೆ ಪಕ್ಕ ಒಂದು ಗ್ರಂಥಾಲಯ ಕಟ್ಟೋಣ, ಪುಸ್ತಕ ಜೋಡಿಸೋಣ.
ನಿಲಯ ಆಲಯ ಆಗಬೇಕು ಎಂದರು.
ಹಿರಿಯರಾದ ಕೆ ಶರಣಪ್ಪ ವಕೀಲರು ಮಾತನಾಡಿ, ಕುಷ್ಟಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿಜಾಂ ಆಡಳಿತ ಇದ್ದಿತು. ಬೇರೆ ಭಾಷೆಯ ಪ್ರಭಾವ ಹೆಚ್ಚಿತ್ತು. ಇಂತಹ ಕಾರಣದಿಂದಲೇ ಈ ಭಾಗ ಹಿಂದುಳಿಯಿತು. ಇಂತಹ ಪ್ರದೇಶದಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆ ಅನುಷ್ಠಾನ ಕಾರ್ಯಕ್ರಮವನ್ನು ತಮ್ಮ ಮನೆಯಲ್ಲಿ ನೆರವೇರಿಸಿದ್ದಕ್ಕೆ ಸಂತೋಷವಾಯಿತು ಎಂದು ತಿಳಿಸಿದರು.
ಬುದ್ಧ ಬಸವ ಅಂಬೇಡ್ಕರ ಅವರ ತತ್ವಗಳನ್ನು ನಾವು ಅರಿಯಬೇಕು. ಅಂದಾಗ ಸಮಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಅವರು ಸಲಹೆ ಮಾಡಿದರು.
ಸಮಾರಂಭದಲ್ಲಿ ರಾಜ್ಯೋತ್ಸವ ಪುರಸ್ಕೃತರಾದ
ಶೇಖರಗೌಡ ಮಾಲಿಪಾಟೀಲ, ಪುಸ್ತಕ ಪ್ರಾಧಿಕಾರದ ಸದಸ್ಯರು ಹಾಗೂ ಸಂಶೋಧಕರಾದ ಡಾ.ಶರಣಪ್ಪ ಕೋಲಕಾರ, ರಾಜ್ಯ ಚಲನಚಿತ್ರ ಅಕಾಡೆಮಿಯ ಸದಸ್ಯರು ಮತ್ತು ಲೇಖಕಿ ಸಾವಿತ್ರಿ ಮುಜಮದಾರ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಗ್ರಂಥಾಲಯ ಜಾಗೃತಿ ಅಭಿಯಾನದ ಸಂಚಾಲಕರು ಹಾಗೂ ಸಾಹಿತಿಗಳಾದ ಜಿ ಎಸ್ ಗೋನಾಳ, ರವೀಂದ್ರ ಬಾಕಳೆ, ಸಾಹಿತಿಗಳಾದ ಹನುಮಂತಪ್ಪ ಈಟಿ, ಡಾ.ಹೀರಾ, ಶರಣಪ್ಪ ತುಮರಿಕೊಪ್ಪ, ಕನ್ನಡಪರ ಹೋರಾಟಗಾರರಾದ ಸ.ಶರಣಪ್ಪ ಪಾಟೀಲ, ಪತ್ರಕರ್ತರಾದ ರವೀಂದ್ರ ಬಾಕಳೆ, ಹನುಮೇಶ ಗುಮಗೇರಿ, ಪವಾಡೆಪ್ಪ ಚೌಡ್ಕಿ, ಪರಶಿವಮೂರ್ತಿ, ಉಮೇಶ ಹಿರೇಮಠ, ರಾಜ್ಯ ಯುವ ಪ್ರಶಸ್ತಿ ವಿಜೇತ ಶ್ರೀನಿವಾಸ ಕಂಟ್ಲಿ ಹಾಗೂ ಇತರರು ಇದ್ದರು.
ಜಾನಪದ ಅಕಾಡೆಮಿಯ ಸದಸ್ಯರು ಹಾಗೂ ಸಾಹಿತಿಗಳಾದ ಜೀವನಸಾಬ ವಾಲೀಕಾರ ಅವರು
ನಿರೂಪಿಸಿದರು.
*ವಿವಿಧೆಡೆ ಕಾರ್ಯಕ್ರಮ:*
ಕುಷ್ಟಗಿ ತಾಲೂಕಿನ ಅಮರೇಗೌಡ ಬಯ್ಯಾಪುರ, ಕೆ ಶರಣಪ್ಪ ವಕೀಲರು, ಡಾ.ನಾಗರಾಜ ಹೀರಾ, ಅಮರೇಗೌಡ ಜಾಲಿಹಾಳ, ಜೀವನಸಾಬ ವಾಲೀಕಾರ, ಹನುಮೇಶ ಗುಮಗೇರಿ ಅವರ ನಿವಾಸದಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ನೆರವೇರಿತು.
*ವಿಶೇಷ ಸನ್ಮಾನ:*
ಕುಷ್ಟಗಿ ತಾಲೂಕಿನ ಮದ್ನಾಳ ಗ್ರಾಮದಲ್ಲಿ ಉತ್ತಮ ಗ್ರಂಥಾಲಯ ಸೇವೆ ಮಾಡುತ್ತಿರುವ ಶರಣಪ್ಪ ತುಮರಿಕೊಪ್ಪ ಅವರಿಗೆ ಅಧ್ಯಕ್ಷರಾದ ಮಾನಸ ಅವರು ಸನ್ಮಾನಿಸಿದರು.
ಕರ್ನಾಟಕ ಸರ್ಕಾರದ ರಾಜ್ಯ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಇವರ ಆಶ್ರಯದಲ್ಲಿ ಕುಷ್ಟಗಿ ನಗರದ ಹಿರಿಯ ಚಿಂತಕರು ಹಾಗೂ ಮಾಜಿ ಶಾಸಕರಾದ ಕೆ ಶರಣಪ್ಪ ವಕೀಲರ ಮನೆಯಲ್ಲಿನ ಪುಟ್ಟ ಗ್ರಂಥ ಭಂಡಾರದ ಸಮ್ಮುಖದಲ್ಲಿ, ಲಕ್ಷ ಗ್ರಂಥಾಲಯಗಳ ಯೋಜನೆ ಮನೆಗೊಂದು ಗ್ರಂಥಾಲಯದ ರೂಪು ರೇಷದ ಕರಪತ್ರವನ್ನು ವಿತರಿಸುವ ಮೂಲಕ ಪ್ರಾಧಿಕಾರದ ರಾಜ್ಯಾಧ್ಯಕ್ಷರಾದ ಡಾ.ಮಾನಸ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.,

ಗಂಗಾವತಿಗೆ ತಹಶೀಲ್ದಾರರಾಗಿ ಯು.ವಸಂತಕುಮಾರಿ ವರ್ಗ ರಾಜ್ಯ ಸರಕಾರದ ಆದೇಶ: ಏ.15ರಂದು ಕರ್ತವ್ಯಕ್ಕೆ